Translate

Friday, 19 July 2013

“ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ"-Political Parties are not Question for our Nation

RAGAM at Shivapara `Mahamane' Programm

“ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ. ಅವು ಪ್ರಜಾಸತ್ತಾತ್ಮಕತೆಯ ಜೀವಂತಿಕೆಯ ಲಕ್ಷಣಗಳು. ಪಕ್ಷಕ್ಕೂ, ಪಥಕ್ಕೂ ಸಮನ್ವಯವಿರಬೇಕಷ್ಟೇ. `ಕಾಂಗ್ರೆಸ್’(Congress) ಗಾಂಧಿ(Gandhi)ಯ ಅರ್ಥದಲ್ಲಿ ಕಾಂಗ್ರೆಸ್(Congress) ಆಗುವುದಾದರೆ, `ಜನತಾ ಪರಿವಾರ’ (Janata Parivar) ಜಯಪ್ರಕಾಶ ನಾರಾಯಣ(Jayaprakash Narayan)ರ ಚಿಂತನೆಯ ಪ್ರತಿಬಿಂಬವಾಗುವುದಾದರೆ, `ಬಿಜೆಪಿ’(BJP) ಪಾಕಿಸ್ತಾನ(Pakistan)ಕ್ಕೆ ಹೋಗಿ ಕಾವ್ಯದ ಮೂಲಕ ಮಾನವ ಸಂಬಂಧಗಳನ್ನು ಬೆಸೆಯುವ ವಾಜಪೇಯಿ(Atal Bihari Vajapeyi) ಅರ್ಥದ ಪಕ್ಷವಾಗುವುದಾದರೆ, ಪಕ್ಷಗಳು ದೇಶಕ್ಕೆ ಹೊರೆಯಲ್ಲ. ಇವುಗಳ ಅನುಸರಣೆ ಅಪರಾಧವೂ ಅಲ್ಲ. ಇವುಗಳೊಂದಿಗೆ ಘರ್ಷಣೆಯ ನಮ್ಮ ಮಾತೂ ಇಲ್ಲ.”





(ದಿ: 14/7/13, ಶಿವಪುರ, `ಮಹಾಮನೆ’ಯಲ್ಲಿ, ಶಿವಾನುಭವ ಗೋಷ್ಠಿ ಉದ್ಘಾಟಿಸುತ್ತಾ ರಾಗಂ)

Friday, 12 July 2013

ಅಭಿಪ್ರಾಯ ಎನ್ನುವದು ಅರ್ಥಹೀನ-ಹೆರ್ಮನ್ ಹೆಸ್‍(( ((Herman Hesse)

Hermann Hesse
ಹೆರ್ಮನ್ ಹೆಸ್‍(Herman Hesse) `ಸಿದ್ದಾರ್ಥ’(Siddharth) ತುಂಬಲೂ ಆತನ ಅನುಭವದ ರಸಾತಳದಿಂದ ಬಂದ ಅನೇಕ ಹೇಳಿಕೆಗಳಿವೆ. ಇಡೀ ಗ್ರಂಥವನ್ನು ಕಂಠಪಾಠ ಮಾಡಬೇಕು ಎಂದು ಓದುಗರಿಗೆ ಅನ್ನಿಸುವಂಥ ಜೀವನ ಪ್ರೀತಿಯನ್ನು ಕಾದಂಬರಿಯಲ್ಲಿ ಆತ ತುಂಬಿದ್ದಾನೆ. ಸಿದ್ಧಾರ್ಥ ಬಂದ ಹೊಸದರಲ್ಲಿ ಪೂರ್ವ ಪಶ್ಚಿಮಗಳ ಚಿಂತಕರಿಬ್ಬರೂ ಹೆಸ್ ವೈಚಾರಿಕತೆಗೆ, ಭಾವ ಸೌಂದರ್ಯಕ್ಕೆ ಮುಗ್ಧರಾದರು, ಪೂರ್ವದ ತೀವ್ರ ಆಕರ್ಷಣೆಗೆ ಒಳಗಾಗಿದ್ದ ಹೆಸ್ ಎಲ್ಲಿಯೂ ಮೈಮರೆಯುವುದಿಲ್ಲ. ಯಾವುದೇ ಗೊಡ್ಡು ಸಿದ್ದಾಂತಗಳಿಗೆ ತಲೆದೂಗುವುದಿಲ್ಲ. ಮನುಷ್ಯ ನಿರ್ಮಿತ ಯುದ್ದದಂತೆ ಹೇಯ ಕ್ರಿಯೆಯಿಂದ ಭೀತಗೊಂಡಿದ್ದ ಹೆಸ್ ಯುದ್ದವನ್ನು ಹಾಗೂ ಅದರ ಭೀತಿಯನ್ನು ಮನುಷ್ಯನ ಬಾಹ್ಯ ಹಾಗೂ ಆಂತರಿಕ ಜಗತ್ತುಗಳೆರಡರಿಂದಲೂ ಬುಡ ಸಮೇತ ನಿರ್ಮೂಲಗೊಳಿಸಲು ಯತ್ನಿಸುತ್ತಾನೆ. ಹೆಸ್ ಪಾಲಿಗೆ ಬದುಕು ಎನ್ನುವುದು ಶರಣಾಗತಿಯಲ್ಲ. ಅಂತೆಯೆ ಹರ್ಮನ್ ಹೆಸ್ ಸಿದ್ದಾರ್ಥ ಮತ್ತೆ ಮತ್ತೆ ಹೇಳುತ್ತಾನೆ. “I will no longer try to escape from Siddhartha. I will no longer devote my thoughts to atman and the sarrows of the world. I will no longer mutilate and destroy myself in order to find a secret behinf the ruins. I will no longer study Yoga-Veda, Atharva-Veda or asceticism, or any other teachings. I will learn from myself, be my own pupil, I will learn from myself the secrete of Siddhartha”.

`Siddhartha' by hermann Hesse
`ಸಿದ್ದಾರ್ಥಕಾದಂಬರಿ ಮುಗಿದರೂ ಪೂರ್ವ-ಪಶ್ಚಿಮಗಳ ಆಧ್ಯಾತ್ಮಿಕ ವಿಚಾರಗಳ ಮಂಥನದಿಂದ ಹೆಸ್ ಮೂಲಕ ಹೊರಬಂದ ವಿಚಾರಗಳನ್ನು ರೀತಿ ಸಂಗ್ರಹಿಸಬಹುದಾಗಿದೆ
1.            ಧ್ಯಾನ ಎಂಬುವುದು ತಾತ್ಕಾಲಿಕ ಪಲಾಯನದ ದಾರಿ, ಮತ್ತೇರಿಸಿ ಮೈಮರೆಸುವ ಶೆರೆಗೂ ಧ್ಯಾನಕ್ಕೂ ದೊಡ್ಡ ವ್ಯತ್ಯಾಸವಿಲ್ಲ.
2.            ಅಭಿಪ್ರಾಯ ಎನ್ನುವದು ಅರ್ಥಹೀನ. ಅದು ರುಚಿಸಿಬಹುದು ಅಥವಾ ಅರುಚಿಯಾಗಿರಲೂಬಹುದು. ಯಾರೂ ಅದನ್ನು ಒಪ್ಪಿಕೊಳ್ಳಬಹುದು ಇಲ್ಲಾ ಧಿಕ್ಕರಿಸಬಹುದು. ಅದು ಜಾಣತನದ ಮಾತಾಗಿರಬಹುದು ಅಥವಾ ಮೂರ್ಖತನದ ಅಭಿವ್ಯಕ್ತಿಯಾಗಿರಬಹುದು. ಜ್ಞಾನದ ಹಸಿವಿನಿಂದ ಬಳಲುತ್ತಿರುವವರಿಗೆ ಜಗತ್ತನ್ನು ವಿವರಿಸುವುದು ಅಭಿಪ್ರಾಯದ ಉದ್ದೇಶವಲ್ಲ. ಅದರ ಗುರಿ ತೀರ ಭಿನ್ನ, ಮನುಷ್ಯನನ್ನು ನರಳುವಿಕೆಯಿಂದ ಮುಕ್ತನನ್ನಾಗಿಸುವುದು.
3.            ಕಲಿಕೆಯಿಂದ ಏನನ್ನೂ ಕಲಿಯಲಾಗುವುದಿಲ್ಲ. ಒಂದು ಅನುಭವಕ್ಕೆ ರೂಪಕೊಡಬಹುದು, ಆದರೆ   ಅನುಭವವನ್ನು ಕಲಿಸಲಾಗದು ಅಥವಾ ಮೂಲಕ ನಮ್ಮದಾಗಿಸಿಕೊಳ್ಳಲಾಗದು.
4.            ಪ್ರೀತಿಯನ್ನು ಕೇಳಬಹುದು ಕೊಡಬಹುದು, ನಮ್ಮ ಸುತ್ತಲೂ ಬದುಕಿರುವ ಎಲ್ಲರಲ್ಲೂ ಅದರ ಸ್ವರೂಪವನ್ನು ನೋಡಬಹುದು ಆದರೆ ಒಬ್ಬರ ಕಣ್ಣು ತಪ್ಪಿಸಿ ಅದನ್ನು ಕದಿಯಲಾಗದು.
5.            ಬರೆಯುವುದು ಉತ್ತಮ, ಚಿಂತಿಸುವುದು ಅತ್ಯುತ್ತಮ: ಜಾಣ್ಮೆ ಉತ್ತಮ, ಸಹನೆ ಅತ್ಯುತ್ತಮ.
6.            ಪ್ರೀತಿಯಲ್ಲಿರುವ ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಪ್ರಶಂಸಿಸದ ಹೊರತು ಒಬ್ಬರಿಂದೊಬ್ಬರು ಅಗಲಬಾರದು.
7.            ಸಭ್ಯತೆ, ಅನಾಗರಿಕತೆಗಿಂತಲೂ; ನೀರು ಕಲ್ಲಿಗಿಂತಲೂ ಹಾಗೂ ಪ್ರೀತಿ ಅಧಿಕಾರಕ್ಕಿಂತಲೂ ಶಕ್ತಿಶಾಲಿ
8.            ಜ್ಞಾನವನ್ನು ಹೇಳಬಹುದು, ಹಂಚಿಕೊಳ್ಳಬಹುದು, ತಿಳುವಳಿಕೆ ಅಥವಾ ಅನುಭವವನ್ನು ಹಂಚಿಕೊಳ್ಳಲಾಗದು, ಎಂಥ ಜ್ಞಾನಿಯೂ ಅದನ್ನು ಹಂಚಿಕೊಳ್ಳಲು ಸಿದ್ದನಾದಾಗ ಮೂರ್ಖನೆನ್ನೆಸಿಕೊಳ್ಳುತ್ತಾನೆ.






ಹೆಚ್ಚಿನ ಓದಿಗಾಗಿ `ಶಬ್ದ ಸೂತಕದಿಂದ’, ಕಣ್ವ ಪ್ರಕಾಶನ, ಬೆಂಗಳೂರು. ಮೊ-೯೮೪೫೦೫೨೪೮೧

Monday, 8 July 2013

ಕವಿತೆಗೆ ಸಾವಿಲ್ಲ



      ಕವಿತೆಗೆ ಸಾವಿಲ್ಲ ಯಾಕೆಂದರೆ ಅದು ಹುಟ್ಟಲಿಲ್ಲ. ಇದುವರೆಗಿನ ಎಲ್ಲ ಭಾಷೆಗಳೊಳಗಿನ ಎಲ್ಲ ಕಾವ್ಯವೂ ನಮ್ಮ ಪಠ್ಯಕ್ರಮದ ವಿಭಜನೆಯಷ್ಟೆ. ಕವಿತೆ, ಅದು ಧರ್ಮ ಹೀಗಾಗಿ ಅದರ ವಿಭಜನೆ ಸಾಧ್ಯವಿಲ್ಲ. ಅದು ಮುಗಿಯದ ದಾರಿ. ಹೀಗಾಗಿ ನಮ್ಮ ವಿಭಜನೆಗಳಾದ ಹಳೆಕಾವ್ಯ, ಹೊಸಕಾವ್ಯ, ಇಂಗ್ಲೀಷ್ಕಾವ್ಯ, ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ, ಬಂಡಾಯೋತ್ತರ ಕಾವ್ಯ ಎನ್ನುವುದು ನಾವೆತ್ತಿಕೊಂಡ ಕಾವ್ಯದ ರಸಯಾತ್ರೆಯಲ್ಲಿ ವಿರಮಿಸಿದ ತಾಣಗಳಷ್ಟೆ. ಅದು ಕಾವ್ಯವೇ ವಿರಮಿಸಿದ ಹಂತವಲ್ಲ. ಕವಿತೆ ವಿರಮಿಸುವುದಿಲ್ಲ ಯಾಕೆಂದರೆ ಅದಿನ್ನೂ ಆರಂಭವೇ ಆಗಿಲ್ಲ. ಮಹತ್ವದ ಕಾವ್ಯಕ್ಕೆ, ಕವಿಗೆ ನಾವಿನ್ನೂ ಕಾಯುತ್ತಿದ್ದೇವೆ. ಇದು ಮಾನವ ಜನಾಂಗವನ್ನು, ಅದರ ಉದಯವನ್ನು ಕುರಿತು ಅರವಿಂದರು ಹೇಳಿದ ವಾಕ್ಯದಂತೆ. `ಮಾನವ ಹೃದಯವನ್ನೇ ಯೋನಿಯಾಗಿಸಿಕೊಂಡು ಹುಟ್ಟಿಬರಲಿಹುದು ದೇವ ಜನಾಂಗ, ಹೀಗೆಯೇ ಕವಿತೆ. ಮನುಷ್ಯ, ಪ್ರಕೃತಿಯ ಒಂದು ಅದ್ಭುತ ಕವಿತೆ.


ಹೆಚ್ಚಿನ ಓದಿಗಾಗಿ: `ಕನ್ನಡಕ್ಕೊಂದು ಕನ್ನಡಿ, ಕಣ್ವ ಪ್ರಕಾಶನ, ಬೆಂಗಳೂರು

Saturday, 15 June 2013

ನನ್ನ ಪಾಲಿನ ಆಲದ ಮರ, ನನ್ನ ಊಟದ ಕರಿಬೇವು:ಗಾಂಧಿ(Gandhi)

Mahatma Gandhi
“ಈ ಗಾಂಧಿ(Gandhi)ಯೊಂದಿಗೆ ಗುದ್ದಾಡುತ್ತಾ ನಾನೀಗ
 ಮಧ್ಯವಯಸ್ಸಿನ ಕದ ತಟ್ಟುತ್ತಿದ್ದೇನೆ. ಆದಾಗ್ಯೂ ಕಳೆದ 40 ವರ್ಷಗಳಿಂದ ಈತ ನನ್ನನ್ನು ಬೇಚೈನಾಗಿ ಉಳಿಸಿದ್ದಾನೆ ಎಂದರೆ ನೀವು ನಂಬಲಿಕ್ಕಿಲ್ಲ. ಅಲ್ಲಲ್ಲಿ ಮಿಣುಕು ದೀಪದಂತೆ, ಉರಿವ ದೀವಟಿಗೆಯಂತೆ, ಮುಗ್ಧವಾಗಿದ್ದ ನನ್ನಜ್ಜನಂತೆ, ಕೆಲವು ಸಲ ಬೇತಾಳದಂತೆ ಈ ಜೀವ ನನ್ನ ಜೀವನ ನಿರ್ಧಾರದ ಹಲವು ತಿರುವಿನ ಸಂದರ್ಭಗಳಲ್ಲಿಯೂ ಕುಣಿದಾಡಿ ಮಾಯವಾಗಿದೆ. ಗುಂಡಿನ ರಾತ್ರಿಗಳಲ್ಲಿ, ಆಲಿಂಗನದ ಆಟಗಳಲ್ಲಿ, ಸತ್ಯ-ಸುಳ್ಳುಗಳ ಬದುಕಿನ ಹಲವು ವಹಿವಾಟುಗಳಲ್ಲಿ, ಈತ ನನ್ನನ್ನು ಪೆಡಂಭೂತದಂತೆ ಬೆನ್ನಟ್ಟಿದ್ದಾನೆ. ಹಾಗೆಯೇ ನಿರ್ವೀಣ್ಯನಾಗಿ ಕುಸಿದು, ಕೊನೆಯುಸಿರಿನತ್ತ ಮನಸ್ಸು ಹೊರಳುವಾಗ ಜೋಹಾನ್ಸ್‍ಬರ್ಗ್‍ದ ಆ ರೈಲ್ವೆಸ್ಟೇಷನ್‍ನಿಂದ ನೇರವಾಗಿ ಎದುರು ಬಂದು ನಿಂತು `ಫಟಾರ್’ ಎಂದು ನನ್ನ ಮುಖಕ್ಕೆ ಹೊಡೆದಿದ್ದಾನೆ, ಎದೆಗೆ ಒದ್ದಿದ್ದಾನೆ. ನನ್ನ ಪಾಲಿನ ಆಲದ ಮರ, ನನ್ನ ಊಟದ ಕರಿಬೇವು ಎರಡೂ ಆಗಿರುವ ಮುಗ್ಧನಗೆಯ, ಸೋರೆಕಾಯಿಯಂಥ ತಲೆಯ, ಈ ಚಾಣಾಕ್ಷ ಮುದುಕ ನನ್ನ ಅತೀ ಪ್ರೀತಿಯ ವಸ್ತುಗಳಲ್ಲಿ ಒಂದಾಗಿದ್ದಾನೆ.”


Mahatma Gandhi
“ಸಂಸಾರದೊಳಗೊಂದು ಸನ್ಯಾಸ, ಸನ್ಯಾಸಿಯಾಗಿ ರಾಷ್ಟ್ರ ರಾಜಕಾರಣದ ಒಂದು ಅಮಿತ ಸಂಸಾರ. ಇವುಗಳನ್ನು ನಿಭಾಯಿಸಲು ಪ್ರಾರ್ಥನೆ, ಯೋಗ, ಯಾತ್ರೆ, ಇವನದೆಲ್ಲವೂ ಸದ್ದಿಲ್ಲದ ದಾರಿ, ಸಾವಿಲ್ಲದ ಯೋಜನೆ, ಯೋಚನೆ. ಈತ ಸರಳ ಮನಸ್ಸಿನ ಸಾಮಾನ್ಯರಿಗೆ ಸುಲಿದ ಬಾಳೆಹಣ್ಣಿನಷ್ಟೇ ಸರಳ, ಕೂದಲು ಸೀಳುವವರಿಗೆ ಇವನೊಂದು ಬಿಡಿಸಲಾಗದ ಕಗ್ಗ. ಒಂದು ಹಂತಕ್ಕೆ ನನಗನ್ನಿಸಿದೆ, ಮನಸ್ಸು ಮಾಗದವನಿಗೆ ಒಗ್ಗುವ ಮಾತಲ್ಲ ಗಾಂಧಿ(Gandhi). ಹ್ಞಾಂ, ಅಂದ ಹಾಗೆ ಗಾಂಧಿ(Gandhi) ಮಾತೂ ಅಲ್ಲ ಬಿಡಿ. ಪ್ರಪಂಚದಲ್ಲಿ ಯಾವುದೇ ರೆಫರೆನ್ಸ್‍ಗಳನ್ನಿಟ್ಟುಕೊಳ್ಳದೇ ಓದಬಹುದಾದ ಒಬ್ಬ ಸರಳ ಮನುಷ್ಯ ಗಾಂಧಿ(Gandhi). ಆದರೆ ಗಾಂಧಿವಾದವನ್ನೋದುವವರಿಗೆ ಗಾಂಧಿ(Gandhi) ಅರ್ಥವಾಗುವುದಿಲ್ಲ”


Mahatma Gandhi
“ಈ ಗಾಂಧಿ(Gandhi) ನಮಗೆ ಏನು ಹೇಳುತ್ತಾನೆ? ಎಂಬ ಒಂದು ಸಣ್ಣ ಕುತೂಹಲ ನನ್ನನ್ನು ಆತನ ಬೆನ್ನು ಬೀಳುವಂತೆ ಮಾಡಿತು.
ಇದೊಂದು ರೀತಿ ಗಾಂಧಿಯೊಂದಿಗಿನ ನನ್ನ ವನವಾಸ ಅಥವಾ ಗಾಂಧೀವಾಸ. ಅಂತಿಮವಾಗಿ ತಿಳಿದಿದ್ದಿಷ್ಟೇ, ಜನಮುಖಿಯಾಗಬೇಕಾದ ಬಾಳಿಗೆ ಪಾಂಡಿತ್ಯದ ಅವಶ್ಯಕತೆಯಿಲ್ಲ. ಮನುಷ್ಯನ ಕ್ರಿಯಾ ಸರಳತೆ ಮಾತನಾಡಿದಷ್ಟು ಸ್ಫುಟವಾಗಿ ಪಾಂಡಿತ್ಯ ಮಾತನಾಡುವುದಿಲ್ಲ. ಸಂತಸದ ಸಂಗತಿಯೇ ಇದು. ಈ ಗಾಂಧಿ(Gandhi) ಪಂಡಿತನಾಗಿರಲಿಲ್ಲ, ಹಟಮಾರಿ ಮನುಷ್ಯನಾಗಿದ್ದ. ಕಸ ಗುಡಿಸುತ್ತಾ, ಜಗಳಾಡುತ್ತಾ, ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ಮಹಾತ್ಮನಾದ. ಸೃಷ್ಟಿಯ ವೈಚಿತ್ರ್ಯ ಇದಲ್ಲವೇ? ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ. ಹೀಗೆ ಹೆಮ್ಮರದ ಬೇರುಗಳಂತೆ ಇಳಿದ ಈ ಗಾಂಧಿ(Gandhi) ನನ್ನ, ನಮ್ಮ ಹಾಗೂ ಪ್ರಪಂಚದ ಸಂವೇದನೆಗಳೊಳಗೆ.”


               ಹೆಚ್ಚಿನ ಓದಿಗಾಗಿ:- `ಗಾಂಧಿ: ಅಂತಿಮ ದಿನಗಳು’& 'ಗಾಂಧಿ:ಮುಗಿಯದ ಅಧ್ಯಾಯ' ಕಣ್ವ ಪ್ರಕಾಶನ, ಬೆಂಗಳೂರು, ಮೊ-9845052481

Thursday, 13 June 2013

ಸಿನಿಮಾ ಅಂದರೆ ಹುಚ್ಚುತನ(Film means Madness)



 
K A Abbas in shooting spot
“ಸಿನಿಮಾ ಅಂದರೆ ಹುಚ್ಚುತನವಲ್ಲದೆ ಮತ್ತೇನು? ಯಾಕೆಂದರೆ ಇಲ್ಲಿ ಎಲ್ಲವೂ ಸತ್ಯದಂತೆ, ಆದರೆ ಸತ್ಯ ಅಲ್ಲ. ಯಶಸ್ಸನ್ನು ನಾಚಿಸುವ ಬದುಕಿನ ಯಶಸ್ಸು, ಸಾವೂ ಕೂಡಾ ಸಂಕಟ ಪಡುವಂಥ ಚಿತ್ರಣ ಸಿನಿಮಾದಲ್ಲಿ ಮಾತ್ರ ಸಾಧ್ಯವಲ್ಲವೇ?”
                                     -ಖ್ವಾಜಾ ಅಹಮ್ಮದ್ ಅಬ್ಬಾಸ್
Money makes the film, but money alone can not write the screenplay, money alone can not act, money alone can not adjust the lens that lends beauty and glamour to the famous and glamorous star-faces. Money is everything, But money is nothing!”
                                                       -Khwaja Ahamed Abbas
“Artists seldom make stable partners.  They are quick to fall in love and as unpredictably fall out of it. The heart of an artist is more delicate than the glass of the bottle. When the two clink and clash,  there is tragedy.
                                                                  
                                                       -Khwaja Ahamed Abbas
                                 

                                        ಹೆಚ್ಚಿನ ಓದಿಗಾಗಿ:- `ಪರದೇಸಿಯ ಫಿಲ್ಮಿ ಪಯಣ’, ಕಣ್ವ ಪ್ರಕಾಶನ, ಬೆಂಗಳೂರು, ಮೊ-9845052481

Wednesday, 12 June 2013

ಶಬ್ದ ಸಂಭೋಗ

                      ಮಾತೊಳಗಿನ ಮೌನವೊ?                      
ಮೌನದೊಳಗಿನ ಮಾತೊ?
ಹುಡುಕುತ್ತ, ಹುಡುಕುತ್ತ
ಈ ಶಬ್ದ ಸಂಭೋಗ
ಸಾಕಾಗಿದೆ ನನಗೆ







ಹೇಳಿದಷ್ಟೂ ಹಾಳಾಗುತ್ತೇನೆ
ಹಾಳಾಗುತ್ತೇನೆ ಎಂದೇ ಹೇಳುತ್ತೇನೆ
ಹೇಳದೆ ಹಾಳಾಗುವುದಕ್ಕಿಂತ
ಹೇಳಿ ಹಾಳಾಗುವುದು ವಾಸಿಯೆಂದೊ
ಅಥವಾ
ಹಾಳಾಗಿಯೇ ಹೇಳುವುದು ಸರಿಯೆಂದೊ
ಕಾಯುತ್ತೇನೆ, ಮತ್ತೆ ಹೇಳುತ್ತೇನೆ



ಹೇಳಿಯೂ ಹಾಳಾಗಿ
ಹಾಳಾಗಿಯೂ ಹೇಳಿ
ಸುಮ್ಮನಿರಲಾಗದ್ದಕ್ಕೆ ಮತ್ತೆ ಹೇಳುತ್ತೇನೆ
ಮುಗಿಯಿತು, ಬರಿದಾಯ್ತು ಅಲ್ವೆ?
ಎಂದು ಕೇಳುತ್ತಲೆ
ಭಯ ಬೀಳುತ್ತೇನೆ
                                                        ಮತ್ತೆ ಹೇಳುತ್ತೇನೆ
  ಈಗ ಗೊತ್ತಾಗಿದೆ
ಮಾತೆನ್ನುವುದು ಖಾಲಿಕೊಡ
ದಿಟ್ಟಿಸಿ ನೋಡಿದರೆ ಜಾಲಿಗಿಡ
ಖಾಲಿಯಾಗಬೇಕೆನ್ನುವ ಬಯಕೆ
ನೆರಳಾಗಬೇಕೆನ್ನುವ ಕನವರಿಕೆ
                                      ಬರೀ ಒಂದು ಮರೀಚಿಕೆ
 ಹೆಚ್ಚಿನ ಓದಿಗಾಗಿ:- `ನಿಶಾಗಾನ’, ಕಣ್ವ ಪ್ರಕಾಶನ, ಬೆಂಗಳೂರು,ಮೊ-9845052481

Friday, 7 June 2013

`ತಲ್ಲಣ' ಎಂದರೆ ಸಾದತ್ ಹಸನ್ ಮಾಂಟೊ(sadat hassan manto)

           `ತಲ್ಲಣ' ಎಂದ ತಕ್ಷಣ ನನಗೆ ತಟ್ಟನೆ ನೆನಪಾಗುವುದು ಸಾದತ್ ಹಸನ್ ಮಾಂಟೊ((sadat hassan manto).
Sadat Hassan Manto
ಕೇವಲ 42 ವರ್ಷ ಬದುಕಿದ್ದ ಬೆಂಕಿಯ ಕುಡಿಯಂಥ ಈ ಬರಹಗಾರ ಭಾರತದ ಮಧ್ಯಯುಗಿನ ಉತ್ತರಾರ್ಧ ಇತಿಹಾಸದ ತಲ್ಲಣಗಳಿಗೆ ಸಾಕ್ಷಿಯಾದವನು. ಮಾನವೀಯತೆಯ ಒಡೆಯಲಾಗದ ಪ್ರತಿಮೆಯನ್ನು ಪ್ರೀತಿಸಿದ್ದ ಈತ ಸಮಾಜ ದೂಷಿತ ಸ್ವೇಚ್ಛಾಚಾರಿಯಾಗಿದ್ದರಿಂದ `ಪಾಪಿ' ಎನಿಸಿಕೊಂಡಿದ್ದ. ಒಂದಿಷ್ಟು ಕಾಲ ಲಾಹೋರ್, ಮತ್ತಷ್ಟು ಕಾಲ ಬೊಂಬೆ, ಹೀಗೆ ಲೋಲಕದಂತೆ  ಒಡಾಡಿಕೊಂಡಿದ್ದ ಸಾದತ್ ಹಸನ್ ಮಾಂಟೊ ಆತನ ಕಾಲದ ಅಸಮಾಧಾನ, ವಿಷಾದ,ತಲ್ಲಣಗಳೇ ಮಡುಗಟ್ಟಿದ ಮಡುವಾಗಿದ್ದ. ಅದೇಕೊ ಗೊತ್ತಿಲ್ಲ, ಇಂಥ ಇನ್ನೊಬ್ಬ ಲೇಖಕ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಚರ್ಚೆಗೆ ಅರ್ಹನಿದ್ದಾನೆ ಎಂದು ನನಗೆ ಇದುವರೆಗೂ ಅನ್ನಿಸಿಲ್ಲ. ಹೀಗಾಗಿಯೇ ನನ್ನ ಪಾಲಿಗೆ `ತಲ್ಲಣ' ಎಂದರೆ ಮಾಂಟೊ. ಬೋದಿಲೇರನಿಗೆ ಬರೆದ ಮುನ್ನುಡಿಯಲ್ಲಿ ನನ್ನ ಈ ವಾದವನ್ನು ಸಮರ್ಥಿಸುವ ಲಂಕೇಶರ ಒಂದಿಷ್ಟು ಮಾತುಗಳಿವೆ. "ಒಂದು ಅನುಭವದ ಅಪಾಯ ಮತ್ತು ದುರಂತವನ್ನು ಎದುರಿಸಿ ಕಾವ್ಯಕ್ಕೆ ಕತ್ತು ಕೊಟ್ಟವರು ನಮ್ಮಲ್ಲಿ ಬಹಳ ಕಡಿಮೆ. ಪಶ್ಚಿಮದಲ್ಲಿ ಇಂಥವರ ಪಂಥವೇ ಇದೆ" ಎಂದಿದ್ದಾರೆ ಲಂಕೇಶ್(Lankesh). ಹೌದು, ಇದನ್ನು ನೀವೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಭಾರತದ ಇತಿಹಾಸದ ಅಗಣಿತ ವಿಪ್ಲವಗಳಿಗೆ ಮನಸ್ಸೊಡ್ಡಿದ ಬಂಗಾಲ, ಉತ್ತರ ಪ್ರದೇಶ, ದೆಹಲಿ, ಮಧ್ಯ ಪ್ರದೇಶ, ಬಿಹಾರ, ಕಾಶ್ಮಿರ ಹಾಗೂ ಪಂಜಾಬಗಳನ್ನು ಹೊರತುಪಡಿಸಿದರೆ ದಕ್ಷಿಣದ ಬಹುಪಾಲು ಬರಹಗಾರರು ಸಾವಿನ ಲೇಪನವಿಲ್ಲದೆ ಬರೆದವರು. ವ್ಯಕ್ತಿ ನೆಲೆಯಲ್ಲಿ ಮತ್ತು ಸಮಷ್ಟಿಯ ನೆಲೆಯಲ್ಲಿಯೂ ಸಂತೃಪ್ತಿಯ ಜಾಡನ್ನು ಹಿಡಿದುಕೊಂಡು ಹೋಗುವ ದಕ್ಷಿಣದ ಬರಹಗಾರ, ತಾಕಲಾಟದ ಸಂದರ್ಭಗೊಳಗಾಗಿದ್ದು ಕಡಿಮೆ ಎಂದುಕೊಂಡಿದ್ದೇನೆ ನಾನು. ಹಾಗೆ ನೋಡಿದರೆ ನಮ್ಮದನ್ನು ಬರಹಗಾರನ `ತಾಕಲಾಟ'ಗಳು ಎಂದುಕೊಳ್ಳುವುದು ಹೆಚ್ಚು ಉಚಿತ. ಇಲ್ಲಿ ತಲ್ಲಣಗಳ ಪ್ರಶ್ನೆ ಕಡಿಮೆ.
         ನಾನು `ತಾಕಲಾಟದ' ಅರ್ಥವನ್ನು ಮಾನಸಿಕ ಘರ್ಷಣೆ ಎಂದು ಗ್ರಹಿಸಿದ್ದೇನೆ. ಆದರೆ `ತಲ್ಲಣ'ದ ಅರ್ಥವ್ಯಾಪ್ತಿ ಬಹಳಷ್ಟು ಸಂಕೀರ್ಣ, ವಿಸ್ತ್ರತ ಹಾಗೂ ವಿಚಿತ್ರ. `ತಲ್ಲಣ' ಒಂದು ರೀತಿಯಲ್ಲಿ ಮನೋವ್ಯಥೆ, ತಾಪ, ಸಂಕಟ, ಕಕ್ಕಾಬಿಕ್ಕಿ, ಹೀಗೆ ಏನೇನೋ. ತಲ್ಲಣಕ್ಕೆ ಸಾಕ್ಷಿ `ಹೆರುವ ಹೊಳೆಯೊಳಗಿಳಿದ ಹೆಣ್ಣು' ಆಗಬಹುದೇನೋ. ತಾಕಲಾಟಕ್ಕೆ ಯಾವ ವ್ಯಾಪಾರಿ ಬುದ್ಧಿಯೂ ಸರಿಹೋದೀತು. ಕಾವ್ಯ ತಲ್ಲಣದ ಕೂಸಾದರೆ, ವಿಮರ್ಶೆ ತಾಕಲಾಟದ ಪ್ರತಿಫಲ ಅಷ್ಟೇ.