Translate

Monday, 23 June 2014

ಪ್ರೀತಿಯಂಥ ವಸ್ತು ಜಗದಲ್ಲಿ ಕಾಣೆ

ಎಲ್ಲ ಕಾಯುವಿಕೆ, ಕೂಡಿಸುವಿಕೆ, ಮತ್ತೆ ಮತ್ತೆ ಕ್ಷಮಿಸುವಿಕೆಗಳ ಹಿಂದೆ ಬರೀ ಕಾಸಿನ, ಕಾಮದ, ಲಾಭದ ಲೆಕ್ಕಾಚಾರಗಳೇ ಇರುವುದಿಲ್ಲ. ಪ್ರಪಂಚದಲ್ಲಿ ವಿನಾ ಕಾರಣ ಪ್ರೀತಿಸುವವರಿದ್ದಾರೆ. ಅವರೆಲ್ಲ ಬರೀ ಗಂಡಸರಲ್ಲ. ಅವರೊಳಗಿನ ತಾಯಿ ಅವರ ದೌರ್ಬಲ್ಯವಲ್ಲ. ಇಂಥ ಪ್ರೀತಿಯನ್ನು ಉಡಾಫೆ ಎಂದುಕೊಳ್ಳುವುದು ಉಡಿಯಲ್ಲಿ ಪಾಪ ಕಟ್ಟಿಕೊಳ್ಳುವುದು ಎರಡೂ ಒಂದೇ. ಇದು ಇನ್ನಾವುದೋ ಜನ್ಮಕ್ಕೆ ಕೈ ಕಳೆದುಕೊಳ್ಳುವ ಸುಳಿವು. 

Saturday, 14 June 2014

ಬಳಸಿ ಬಿಸಾಡುವ ಕಾರ್ಪೊರೇಟ್. . .

      ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

Sunday, 4 May 2014

ಮೀನಾಕುಮಾರಿ, ಗುಲ್ಜಾರ್ ಮತ್ತು ಫಾಲ್ಕೆ…(meenakumari, Gulzar and Phalke)

ಕಾಳಸಂತೆಯಲ್ಲಿಯೂ ಕಾವ್ಯ ಕಾಯ್ದಿರಿಸಿಕೊಂಡವರು ಗುಲ್ಜಾರ್ , ಚೂರು - ಪಾರು , ಅಲ್ಲಿ - ಇಲ್ಲಿ ಅವರ ಕವಿತೆಗಳನ್ನು ಓದಿದ್ದು ಬಿಟ್ಟರೆ ನಾನು ಅವರನ್ನು ಸಮಗ್ರವಾಗಿ ಕುಡಿದವನಲ್ಲ . ಕುಡಿತ ಕೆಲವೊಮ್ಮೆ ಸಂಪೂರ್ಣವಾಗಬೇಕಾದುದು ಇಲ್ಲ . ಖಾಲಿ ಗ್ಲಾಸಿನಲ್ಲಿಯ ಮಧ್ ಹೋಶಿ ಮರುಳಾಗದವನು ಕುಡಿದೂ ಭಾವ ಪರವಶತೆಗೆ ಏರಲಾರ . ಕುಡಿತದಲ್ಲಿ ಖಾಲಿತನಕ್ಕೆ ಎಷ್ಟು ಅರ್ಥವಿದೆಯೋ ಕಾವ್ಯದಲ್ಲಿ ನಿಶ್ಯಬ್ದಿಗೆ ಅಷ್ಟೇ ಘನತೆಯಿದೆ . ಅದು ಶಬ್ದದೊಳಗೆ ಕಾಣುವ ಸತ್ಯ . ಆಯಾಮವನ್ನು ತಮ್ಮ ಕಾವ್ಯದಲ್ಲಿ , ಬದುಕಿನಲ್ಲಿ ಸಾಧಿಸಿದವರು ಗುಲ್ಜಾರ್ . ಅವರ ಕಾವ್ಯಕ್ಕಿಗ ಫಾಲ್ಕೆ ದಕ್ಕಿದೆ . ಆದರೆ ಪ್ರಶಸ್ತಿ , ಪಾ ತೋಷಕಗಳ ಗಡಿಯನ್ನು ಉಲ್ಲಂಘಿಸುತ್ತ ಹೊರಡುವ ಗುಲ್ಜಾರ್ ಮತ್ತು ಅವರ ಕಾವ್ಯದ ಮೇಲೆ ಎಲ್ಲರ ಹಕ್ಕು ಇದೆ
ಅವರ `ಮೀನಾಕುಮಾರಿ ಕಿ ಶಿಕವಾಯೆಂ' ಸಂಗ್ರಹದ  ಕೆಲವು ಶಾಯರಿಗಳ ಭಾವಾನುವಾದ ಇಲ್ಲಿದೆ. 



ಹುಚ್ಚು ಪ್ರೇಯಸಿ ನಾನು
ರಾತ್ರಿ ಕಳೆಯುತ್ತೇನೆ
ದುಃಖವೇ ನನ್ನ ವೈರಿ
ದುಃಖವೇ ಹಂಬಲ ಈ ಹೃದಯಕೆ            
ಮತ್ತೆ
ಅಗಲುವಿಕೆಯ ಅರೆಕ್ಷಣದಲ್ಲೂ
ಅದರದೇ ಹುಡುಕಾಟ



ನಾ ಹೇಗೆ ಬದುಕುವೆ?
ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ,
ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ
ಓ ದೇವರೇ,
ಬದುಕುವುದೆಂದರೆ ಉಸಿರಾಟವೇ, ಅಲ್ಲ
ಈಗ ಹೃದಯಕ್ಕೆ
ನೋವಿನ ಭಾಧೆಯಿಲ್ಲ
ಕಣ್ಣಾಲೆಗಳಲ್ಲಿ ಮತ್ತಷ್ಟು
ಕಣ್ಣೀರಿಗೆ ಸ್ಥಳವಿಲ್ಲ
ಭಗ್ನ ಕನಸುಗಳು ಮಾತ್ರ
ನಿದ್ರಾಹೀನ ರಾತ್ರಿಗಳ
ಇರಿಯುತ್ತಲೇ ಇರುತ್ತವೆ
ಮುಳ್ಳುಗಳಂತೆ


Saturday, 15 March 2014

ಜಡಿ ಮಳೆಯೆಂದರೆ ಧಾರವಾಡ..........


                                           ಗುಡ್ಡ ಗುಡ್ಡ ಸ್ಥಾವರಲಿಂಗ ಮಾಡಿಧಾಂಗ ಅಭ್ಯಂಗ  
                                                                                                                     -ದ. ರಾ. ಬೇಂದ್ರೆ

    



                         ಬದುಕಿನ ಒಂದೇ ಒಂದು ಕ್ಷಣ ಈ ನೆಲವನ್ನು ಬಳಸಿಕೊಂಡು ಹೋದವರಾರು ಹಾಡಿಕೊಳ್ಳದೇ ಉಳಿದಿಲ್ಲ, ಅಕ್ಷರ ಬಲ್ಲವರು ಬರಹಗಾರರಾಗದೇ ಉಳಿದಿಲ್ಲ, ಎಂಥ ಮಾಯಾನಗರಿ ಈ ಧಾರವಾಡ! ಎಷ್ಟೊಂದು ಸಮೃದ್ಧ ಇಲ್ಲಿಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರ. ಇದರ ಭಾವ ಶ್ರೀಮಂತಿಕೆಯನ್ನು ತಿಳಿಯಬೇಕದರೆ ನೀವು ಎಚ್.ಕೆ.ರಂಗನಾಥರ `ನೆನಪಿನ ನಂದನ’ ಆತ್ಮಕಥನವನ್ನು ಓದಬೇಕು. ಅವರು ಬರೆಯುತ್ತಾರೆ, “ ಅಂದು ನಾನು ಕಂಡ ಧಾರವಾಡವನ್ನು ಇಂದು ನೆನಪಿಸಿಕೊಂಡರೆ ನಿಜವಾಗಿಯು ಅದು ಭೂ ಸ್ವರ್ಗ. ಅಲ್ಲಿನ ಸಮೃದ್ಧವಾದ ಹಸಿರು, ಹೂವು, ಹಣ್ಣು-ಹಂಪಲು, ಈವರೆಗೆ ನಾನು ಅದಕೆ ಸರಿಸಾಟಿ ಕಂಡಿರಲಿಲ್ಲ. ಊರು ಸಣ್ಣದು, ಸಪ್ತಾಪುರ, ಎಮ್ಮೆಕೆರೆ, ಕೆಲಗೇರಿ, ಹಾಲಗೇರಿ ಮೊದಲಾದ ಅನ್ವರ್ಥಕ ಬಡಾವಣೆಗಳು. ಸಾಹಿತ್ಯ, ಕಾವ್ಯ, ನಾಟಕಗಳ ಹೆಪ್ಪು ನೆಲವೆಂದರೆ ಸಾಧನಕೇರಿ. ಆಲೂರು ವೆಂಕಟರಾಯರು, ಬೇಂದ್ರೆಯವರು, ಶಂಬಾರವರು, ಶ್ರೀರಂಗರು, ಕವಲಿಯವರು, ಹುಯಿಲಗೋಳ, ಇನಾಂದಾರ್, ಇವರ ಮನೆಗಳು ಇದ್ದದ್ದು ಅಲ್ಲಿಯೇ. ಕೆಲ ಮನೆಗಳಲ್ಲಿ ವಿದ್ಯುತ್ ದೀಪ ಕಂಡರೂ ರಸ್ತೆಗೆ ಬಂದಿರಲಿಲ್ಲ. ತಿಂಗಳ ಬೆಳಕು ಎಂದರೆ ಹಾಲಿನ ಹೊಳೆ. ಹುಣ್ಣಿಮೆಯ ರಾತ್ರಿ ಪುಸ್ತಕ ಹಿಡಿದು ಓದಬಹುದು. ಹಾಗೆಯೇ ಕೃಷ್ಣ ಪಕ್ಷದ ರಾತ್ರಿಯ ಕತ್ತಲು, ಹೆಪ್ಯ್ಪಗಟ್ಟಿದ ಕಗ್ಗತ್ತಲು, ಕಣ್ಣು ಮುಂದೆ ಕೈ ಹಿಡಿದರೂ ಬೆಳಕು ಕಾಣುವಂತಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ಎಲ್ಲೆಲ್ಲೂ ಗಿಡ-ಮರಗಳು, ಇಡಿ ರಾತ್ರಿ ಕೀಟ ಮೇಳದ ನಿಶಾಗಾನ, ಮಳೆಗಾಲದಲ್ಲಿನ ಸೋನೆ ಮಳೆ ದಿನ ದಿನಗಳವೆರೆಗೆ ಬಿಡುವುದಿಲ್ಲ. ಧಾರವಾಡದ ಜಡಿ ಮಳೆಯೆಂದರೆ ತಲೆಯನ್ನು ಹೊರಗೆ ಹಾಕುವಂತಿಲ್ಲ. ಅಲ್ಲಿನ ಮಿಂಚು- ಗುಡುಗು-ಸಿಡಿಲು ಎಂದರೆ `ಶ್ರಾವಣ ಬಂತು ಶ್ರಾವಣ’ ಎಂಬ ಕವಿತೆಯಲ್ಲಿ ಬೇಂದ್ರೆಯವರು ನುಡಿದಂತೆ ವಿರಾಟ ವೈಭವ.
    

                                   ಇಂಥ ನಮ್ಮ ಧಾರವಾಡ ಅದೆಷ್ಟು ಯುಗಾದಿಗಳನ್ನು ಕಂಡಿದೆಯೋ, ಅದೆಷ್ಟು ಹಾಡು-ಹಬ್ಬದ ಸಂಭ್ರಮವನ್ನಾಚರಿಸಿಕೊಂಡಿದೆಯೋ ಇದು ಲೆಕ್ಕಕ್ಕೆ ಸಿಗದ ಲೆಕ್ಕ. ಆದರೆ ಪ್ರತಿ ಯುಗಾದಿಯ ಆದಿಯಲ್ಲೊಮ್ಮೆ ಈ ಬದುಕಿನ ಲೆಕ್ಕಾಚಾರ, ಆತ್ಮಾವಲೋಕನ ನಡೆದಿರಲಿಕ್ಕೆ ಸಾಕು, ಈ ಸಮ್ರುದ್ಧ ನೆಲಕ್ಕೊಮ್ಮೆ ದೂರ ದೂರದಿಂದ ಹಕ್ಕಿಗಳು ಬಂದು ಸೇರುವಂತೆ ಅದೆಷ್ಟೋ ಸೃಜನ ಶೀಲರು ಬಂದಿದ್ದಾರೆ. ಮರಳಿ ಹೋಗಿದ್ದಾರೆ. ಆದಾಗ್ಯೂ ಇದ್ಯಾವುದರಿಂದಲೂ ಅಭಾದಿತವಾಗದೇ ಇಲ್ಲಿ ನಿತ್ಯ ಹೂ ಅರಳುತ್ತಲೇ ಇವೆ. ನಿಸ್ಸಂಶಯವಾಗಿಯೂ ಅಂದಿನ ಧಾರವಾಡ ಇಂದಿಲ್ಲ, ಇಂದಿರುವುದು ನಾಳೆಯು ಇರಲಿಕ್ಕಿಲ್ಲವೇನೊ. ಪ್ರತಿ ಜನಾಂಗಕ್ಕೆ, ತಲೆಮಾರಿಗೆ ಹೊಸ ಸೊಬಗು, ಕನಸು, ಭರವಸೆಗಳಿರುವಂತೆ ನಮ್ಮ ಧಾರವಾಡಕ್ಕೂ. ಅಂತೆಯೇ ಈ ಮಾಯಾನಗರಿಯನ್ನು ಕುರಿತು ನಾನು ಹಾಡಿಕೊಂಡಿದ್ದೇನೆ-
 

“ನನ್ನೂರ ಧಾರವಾಡ
ನನ್ಹಿಂಗ ಕಾಡಬ್ಯಾಡ
ಎದೆಯಾಗ ನೂರು ತರದ
ತುಡಬುಡಕಿಯಾಡಬೇಡ”

Sunday, 19 January 2014

ಬಲರಾಜ್ ಸಹಾನಿ(Balaraj Sahani) ನಿಮಗೆಷ್ಟು ಗೊತ್ತು....

Balaraj Sahani and K A Abbas
Balaraj Sahani
ಶ್ರೇಷ್ಠ ನಾಟಕಕಾರ ಭೀಷ್ಮ ಸಹಾನಿಯ ಸಹೋದರ ಬಲರಾಜ ಸಹಾನಿ ಪಾತ್ರಧಾರಿಯಾಗಿ ಸಿನಿಮಾಗಳಲ್ಲಿ ನಟಿಸಿದ್ದು ಮುಖ್ಯ ವಿಷಯವೇನೂ ಅಲ್ಲ. ಆದರೆ ನಟಿಸಿದ ಪರಿ, ಆ ತನ್ಮಯತೆ, ಪಾತ್ರಗಳಿಗಾಗಿ ತನ್ನನ್ನೇ ತಾನು ತೊಡಗಿಸಿಕೊಂಡ ರೀತಿ ಮಾತ್ರ ಅದ್ಭುತ.
Balaraj Sahani and K A Abbas
Balaraj Sahani 

                     ಈ ಬಲರಾಜ್ ಸಹಾನಿ ದಿನಕ್ಕೆ ಎರಡೇ ಎರಡು ತುಂಡು ಬ್ರೆಡ್ ತಿಂದು, ಕಲಕತ್ತೆಯ ಝೋಪಡಿಗಳಲ್ಲಿ ಸೈಕಲ್‍ವಾಲಾಗಳೊಂದಿಗೆ ವಾಸಿಸಿ ‘ಧೋ ಭೀಗಾ ಝಮೀನ’ ಮಾಡಿದ. ಅಬ್ಬಾಸರ ‘ಜುಬೈದಾ’ ನಾಟಕದಲ್ಲಿ ಕುದುರೆಯೊಂದಿಗೆ ‘ಬಾರಾತ್’ನ್ನು ವೇದಿಕೆಯ ಮೇಲೆ ತಂದು ವೈಶಿಷ್ಟ್ಯ ಮೆರೆದ. “ಆಖರೀ ಶ್ಯಾಮ್’ ದೊಳಗಿನ ತನ್ನ ಮಿರ್ಜಾ ಗಾಲಿಬನ ಪಾತ್ರಕ್ಕಾಗಿ ದೆಹಲಿಯ Tipical ಉರ್ದು ಭಾಷೆಯನ್ನು ಕಲಿತ, ಟ್ಯಾಗೋರರ ‘ಕಾಬೂಲಿವಾಲಾ’ದೊಳಗಿನ ಮಿಠಾಯಿ ಮಾರುವ ಪಠಾಣನ ಪಾತ್ರಕ್ಕಾಗಿ ರಾವಲ್‍ಪಿಂಡಿಯ ರಬಾಬ ನುಡಿಸುವುದನ್ನು ಕಲಿತ, ಎಂ.ಎಸ್.ಸತ್ಯು ನಿರ್ದೇಶನದ ‘ಗರಂಹವಾ’ ಸಿನಿಮಾದಲ್ಲಿಯ ಚಪ್ಪಲಿಯ ವ್ಯಾಪಾರಿಯ ಪಾತ್ರಕ್ಕಾಗಿ ಆಗ್ರಾದ ಮುಸ್ಲಿಂರೊಂದಿಗೆ ಚರ್ಮ ಹದ ಮಾಡಲು ಕಲಿತ, ಸಿನಿಮಾದ ಬಿಡುವಿನ ವೇಳೆಯಲ್ಲಿ ತನ್ನ ಮೂಲ ನೆಲವಾದ ಪಂಜಾಬಿನ ಜನಪದ ಸಾಹಿತ್ಯ ಹಾಡು, ಕತೆಗಳನ್ನು ಕಲೆಹಾಕಿದ, ಷಾಟ್‍ಗಳ ಮಧ್ಯದ ವಿರಾಮ ಕಾಲದಲ್ಲಿ ತನ್ನೊಂದಿಗೆ ಸದಾ ಹೊತ್ತೊಯ್ದಿರುತ್ತಿದ್ದ ಟೈಪ್‍ರೈಟರ್ ಸಹಾಯದಿಂದ ಮಾತೃಭಾಷೆಯಾದ ಗುರುಮುಖಿಯಲ್ಲಿ ಕತೆ, ನಾಟಕ, ಪತ್ರಿಕೆಗಳಿಗೆ ಲೇಖನ, ಪಾಕಿಸ್ತಾನಕ್ಕೆ ತನ್ನ ಭೆಟ್ಟಿ ಕುರಿತಾಗಿ ಪ್ರವಾಸ ಕಥನ, ಹೀಗೆ ಏನೆಲ್ಲ ಬರೆದ. ಬಲರಾಜ ಸಹಾನಿ ಎಂದರೆ ಕೆಲಸ, ಪ್ರಾಮಾಣಿಕತೆ ಹಾಗೂ ಬದ್ಧತೆ. ಬಲರಾಜ ಸಹಾನಿ ಎಂದರೆ ಇಂಗ್ಲಿಷ್, ಹಿಂದೀ, ಉರ್ದು, ಗುರುಮುಖಿ ಹಾಗೂ ಪಂಜಾಬಿನ ಸಾಹಿತ್ಯ ಹಾಗೂ ಸಂಸ್ಕೃತಿಯ ಸಂಗಮ. ಇಂಥ ಅಭೂತಪೂರ್ವ ವ್ಯಕ್ತಿಯನ್ನು ನೆನೆದು ಅಬ್ಬಾಸ್ ದಾಖಲಿಸಿದ ಈ ಸಾಲುಗಳನ್ನು ನೋಡಿ -
Balaraj Sahani and K A Abbas
Balaraj Sahani






“Balraj Sahani was not an ivory tower intellectual and artist, his knowledge of the common people was born out of his partcipation in the struggles of the people for freedom and for union activities, while facing the brutal lathis and bullet-spouting rifles of the police like Gorky, Life was his great university, jails provided the post-graduate tutorials to Balaraj Sahani, the eternal student of life and of the people”. 




ಹೆಚ್ಚಿನ ಒದಿಗಾಗಿ- ಪರ್ದೇಸಿಯ ಫಿಲ್ಮಿ ಪಯಣ, ರಾಜಶೇಖರ ಮಠಪತಿ(ರಾಗಂ), ಕಣ್ವ ಪ್ರಕಾಶನ, ಬೆಂಗಳೂರು