Translate

Monday 30 September 2013

ಮಹಾತ್ಮ ಗಾಂಧಿ: ಬರೀ ಅಕ್ಟೋಬರ್ (October)2 ರ ನೆನಪೇ?...


                                                        
                                             
   
Mahatma Gandi

ಗಾಂಧಿ ಬರೀ ಒಂದು ದೇಹವಲ್ಲ ಎಂದು ನೀವು ಒಪ್ಪುವುದಾದರೆ ಈತನ ಪ್ರವಾಸ ಸಾವಿರಾರು ವರ್ಷಗಳ ಹಿಂದೆಯೆ ಶುರುವಾಗಿದೆ. ಇದು ಆತ್ಮವನ್ನು, ಅದರ ಅವಿನಾಶಿ ಜಂಗಮತ್ವವನ್ನು ಒಪ್ಪಿಕೊಳ್ಳುವ ಎಲ್ಲರಿಗೂ ಅನ್ವಯವಾಗುವ ಮಾತೂ ಕೂಡ. ಲೆಕ್ಕಚಾರಗಳೆಲ್ಲ ಏನೇ ಇರಲಿ, ನಮಗೆ ಬೇಕಾಗಿಯೂ ಬೇಡಾಗಿಯೂ ನಮ್ಮ ಇತಿಹಾಸ, ವರ್ತಮಾನದ ಉದ್ಧರಣೆಯಾಗಿದ್ದಾನೆ ಗಾಂಧಿ. ಭವಿಷ್ಯದಿಂದಲೂ ಆತನನ್ನು ನಾವು ಧಿಕ್ಕರಿಸುವಂತಿಲ್ಲ. ರಜೆಯಾಗಿ, ಅಕ್ಟೋಬರ್ 2(October 2) ರ ಮೋಜಾಗಿ ಬಂದೇ ಬರುತ್ತಾನೆ ಗಾಂಧಿ. ಚೌಕು, ವೃತ್ತಗಳಲ್ಲಿ, ಕಾಲೇಜು, ಬಂದೀಖಾನೆಗಳಲ್ಲಿ, ಫೊಟೋ ಪುತ್ಥಳಿಯಾಗಿ, ಕಣ್ಣಿರಿಯುತ್ತಾನೆ ಗಾಂಧಿ. ಗುಂಡು-ಗೋಷ್ಠಿಗಳಲ್ಲಿ, ಸುಳ್ಳಿನ ಸಂತೆಯಲ್ಲಿ, ಕಾಳ ಸಂತೆಯಲಿ ಪುತ್ಥಳಿಯಾಗಿ ಮಾರಾಟವಾಗುತ್ತಾನೆ ಗಾಂಧಿ. ಉಪವಾಸದ ನಾಟಕಗಳಲ್ಲಿ, ಧರ್ಮಾರ್ಥ ಚಿಂತನೆಗಳಲ್ಲಿ ಸಾಕ್ಷಿಯಾಗುತ್ತಾನೆ ಗಾಂಧಿ. ಗಾಂಧಿಯಿಲ್ಲದ ಯಾವುದಾದರು ಸ್ಥಳ ಅಥವಾ ಆಲೋಚನೆಯನ್ನು ನಾವು ಕಲ್ಪಿಸಬಹುದೇ? ನನಗಿದು ಬಿಡಿಸಲಾಗದ ಪ್ರಶ್ನೆ. ಹೀಗೆಲ್ಲಾ ಗಾಂಧಿಯ ಬಗ್ಗೆ ವಿವೇಚಿಸುತ್ತಾ ಗಾಂಧಿಯನ್ನು ನಾವೆಲ್ಲಿಗೆ ಕರೆದೊಯ್ದೆವು? ನಮ್ಮ ಸಾಮಾಜಿಕತೆ ಮತ್ತು ರಾಜಕೀಯದ ಯಾವ ಅಳತೆಗೋಲಾಗಿ ಅವನನ್ನು ಇಟ್ಟುಕೊಂಡೆವು ನನಗೆ ತಿಳಿಯುತ್ತಿಲ್ಲ.
   
ನಾವು ಗಾಂಧಿಯನ್ನು, ಆತನ ವಿಚಾರಗಳನ್ನು ಅನುಸರಿಸಿದ್ದಕ್ಕಿಂತ ಆರಾಧಿಸಿದ್ದೇ ಹೆಚ್ಚು. ವ್ಯಕ್ತಿ ಆರಾಧನೆ, ಎಲ್ಲೋ ನಮ್ಮನ್ನು ಆತನಿಂದ, ಆತನನ್ನು ನಮ್ಮಿಂದ ದೂರ ಒಯ್ದು ನಿಲ್ಲಿಸಿಬಿಡುತ್ತದೆ. ಪ್ರಪಂಚದ ಎಲ್ಲ ಸಾಮಾಜಿಕ ಸುಧಾರಕರು ಕಾರಣಕ್ಕಾಗಿ ಅಲ್ಲವೇ ದೇವರಾಗಿರುವುದು! ನಮ್ಮ ಗಾಂಧಿ ಅವನ ಆಶಯಕ್ಕೂ ವಿರುದ್ಧವಾಗಿ ಮಹಾತ್ಮನಾಗುವುದು ಅವನ ಆರಾಧಕರಿಂದಲೇ. ಇರುವ ಒಬ್ಬ ಗಾಂಧಿಗೆ ಕೋಟಿ ಕೋಟಿ ಗಾಂಧಿಗಳನ್ನು ಕಲ್ಪಿಸಿಕೊಂಡು, ತಮ್ಮ ಹೃದಯಗಳಲ್ಲಿ ಇಟ್ಟುಕೊಂಡು ಪೂಜಿಸಿದರಲ್ಲಾ, ಇದನ್ನು ಏನೆನ್ನಬೇಕು? ಕಾಲದ ಅಂತರದಲ್ಲಿ ಕುಳಿತುಕೊಂಡು ನಾವೀಗ ಪ್ರಶ್ನಿಸಿಕೊಳ್ಳಬೇಕಿದೆ, ಗಾಂಧಿಯೂ ಒಬ್ಬ ಮನುಷ್ಯ ತಾನೇ? ಎಲ್ಲಾ ಆರೋಪ, ಅಪವಾದಗಳಿಂದ ಹೊರತಾದ ಗಾಂಧಿ ನಮ್ಮವನಾಗಲು ಸಾಧ್ಯವೇ? ದೇವರನ್ನೂ ತಮ್ಮ ಅಳತೆಯ ಲೆಕ್ಕಾಚಾರದಲ್ಲಿ ನೋಡುವ ಮನುಷ್ಯನಿಗೆ ಗಾಂಧಿಯ ಪರಿಯ ಆರಾಧನೆ ಸಮಂಜಸವೆನಿಸಿತೋ ಏನೋ ಗೊತ್ತಿಲ್ಲ. ಗಾಂಧಿ, ನಮ್ಮ-ನಿಮ್ಮೆಲ್ಲರ ಗಾಂಧಿ, ನೀವೂ ಪ್ರೀತಿಸಿಯೂ ಬದುಕಲಾರದ, ಒಪ್ಪಿಯೂ ಅನುಸರಿಸಲಾಗದ, ಆರಾಧಿಸಿಯೂ ಅಪ್ಪಲಾಗದ, ಕಲಿತು ಕಲಿಸಲಾಗದ ಗಾಂಧಿಯೇ ಒಂದು ವಿಚಿತ್ರ. ಆದರೆ ಆತ ದೇವರಾಗದೆ, ಮಹಾತ್ಮನಾಗಿರುವುದೇ ನನಗೆ ಒಂದಿಷ್ಟು ಸಮಾಧಾನ ತಂದಿದೆ. ಸಂತನೋ, ಮಹಾಂತನೋ ಅಥವಾ ಮಹಾತ್ಮನೋ ಇವರೆಲ್ಲಾ ಯಾವುದೇ ಪ್ರಮಾಣದ ಆರಾಧನೆಗೊಳಗಾಗಿಯೂ, ಮನುಷ್ಯರ ಲೋಕಕ್ಕೆ ಸಮೀಪವಾಗಿಯೇ ಉಳಿಯುತ್ತಾರೆ. 


ಹೆಚ್ಚಿನ ಓದಿಗಾಗಿ: ‘ಗಾಂಧಿ:ಅಂತಿಮ ದಿನಗಳು’ ಮತ್ತು ‘ಗಾಂಧಿ:ಮುಗಿಯದ ಅಧ್ಯಾಯ’, ಕಣ್ವ ಪ್ರಕಾಶನ, ಬೆಂಗಳೂರು-
ಮೊಬೈಲ್ ಸಂಖ್ಯೆ: ೯೮೪೫೦೫೪೮೧