Translate

Friday 9 August 2013

ಇಲ್ಲಿ ಮನುಷ್ಯರಿದ್ದಾರೆ, ಎಚ್ಚರಿಕೆ!!!!!

French Warrier Walter
Walter and his Dog
ಫ್ರೆಂಚ್ ಕ್ರಾಂತಿಯ ಕೇಂದ್ರ ಮನಸ್ಸಾಗಿದ್ದ ವಾಲ್ಟೇರ್ ಹುಟ್ಟು ಧನಿಕ. ಆತ ತೀರಿ ಹೋದಾಗ ಆತನ ಸಮಾಧಿಯವರೆಗೂ ಬಂದದ್ದು ಮಾತ್ರ ಆತ ಸಾಕಿದ ನಾಯಿ. ಕ್ರಾಂತಿಯ ಬೀಜ ಮರವಾಗಿ ಬೆಳೆದು ಹೂವು, ಹಣ್ಣು ಬಿಡುವ ಕಾಲಕ್ಕೆ ಅವರಿಬ್ಬರೂ ಇರಲಿಲ್ಲ. ಕ್ರಾಂತಿಯ ಸ್ಮರಣೋತ್ಸವಗಳಾದವು. ಯಾರಿಗೋ ಹಣ, ಇನ್ಯಾರಿಗೋ ಅಧಿಕಾರ, ಮತ್ಯಾರಿಗೋ ಸ್ವಾತಂತ್ರ ಸಿಕ್ಕು ದೇಶ ಸುಭಿಕ್ಷೆಯ ಬೀಡಾಯಿತು.ಆದರೆ ವಾಲ್ಟೇರ್ ಮತ್ತು ಆತನ ನಾಯಿ ಮಾತ್ರ ಧನಿಕನಾಗಿ ಹುಟ್ಟಿ ಬಡತನದ ದಾರಿದ್ರ್ಯದಲ್ಲಿ ಮರೆಯಾದರು. ಈ ಘಟನೆಯನ್ನು ನನಗೇಕೋ ಮರೆಯಲಾಗಲಿಲ್ಲ. ಇದು ಎಲ್ಲೋ ನನ್ನ ಒಟ್ಟು ಕಾವ್ಯದ ಒಳಹೂರಣವಾಗಿ ಬದುಕಿನ ದೃಷ್ಟಿಕೋನವಾಗಿ, ಗುರಿಯಾಗಿ, ಸಾಲುಗಳ ತುಂಬಾ ಗರಿಗೆದರುತ್ತದೆ. ಒಂದರ್ಥದಲ್ಲಿ ನಾಯಿಯಂತಹ ಮನುಷ್ಯರಿದ್ದರೆ ನಮ್ಮ ಕಾರುಣ್ಯದ ಲೋಕ ಅದೆಷ್ಟು ಅದ್ಭುತವಾಗಿರುತಿತ್ತು ಎಂದು ಲೆಕ್ಕ ಹಾಕುತ್ತೇನೆ. ಅಂಥವರಿಲ್ಲದಿರುವುದೇ  ಕಾವ್ಯದ ಇರುವಿಕೆಗೆ ಕಾರಣವಾಗುತ್ತದೆ. ಜಗತ್ತೆಲ್ಲವೂ ಮನುಷ್ಯರಿಂದ, ಅವರ ಶಿಖಂಡಿತನದ ನಾಟಕಗಳಿಂದ, ಜಾತಿ ಡೊಂಬರ ಟೀಕೆಗಳಿಂದ, ದೇವರಾಗುತ್ತಿರುವ ಸನಾತನಿಗಳಿಂದ, ಪಾಶಾಂಡರಿಂದ, ವಿಷ ಎರೆಯುವ ಹೆಂಗಸರಿಂದ, ಶಬ್ದಗಳ ಹಾದರ ಮಾಡುವ ಜೋಗತಿಯರಿಂದ ತುಂಬಿ ಹೋದಂತೆ ಭಾಸವಾಗುತ್ತದೆ. ನಿಮಗೆಲ್ಲ `ಇಲ್ಲಿ ಮನುಷ್ಯರಿದ್ದಾರೆ, ಎಚ್ಚರಿಕೆ’ ಎಂದು ತಿಳಿಹೇಳಬಯಸುತ್ತೇನೆ. ನಾನು ಮಾತ್ರ ಮಾತೇ ಇಲ್ಲದ, ಮಾತೃ ಸದೃಶ್ಯದ, ಕರುಣೆಯ ಕಣ್ಣುಗಳ ನಾಯಿಯನ್ನು ಹುಡುಕುತ್ತಿದ್ದೇನೆ.